ಸುವರ್ಣ ಸಂಭ್ರಮದಲ್ಲಿ ಶ್ರೀ ಬ್ರಹ್ಮ ಭೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ ಕಿದಿಯೂರು
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಮಾರ್ಚ್ 15 , 2014
|
ಉಡುಪಿಯ ಹಿರಿಯ ಹವ್ಯಾಸಿ ಯಕ್ಷಗಾನ ಮಂಡಳಿಗಳಲ್ಲಿ ಒಂದಾದ ಕಿದಿಯೂರು ಬ್ರಹ್ಮ ಭೈದರ್ಕಳ ಧೂಮಾವತಿ ಯಕ್ಷಗಾನ ಕಲಾಮಂಡಳಿಗೆ ಈ ವರ್ಷ 50ನೇ ವರ್ಷದ ಸುವರ್ಣ ಸಂಭ್ರಮ. ವರ್ಷಪೂರ್ತಿ ಯಕ್ಷಗಾನದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡ ಸಂಸ್ಥೆ ಇದೇ ಮಾರ್ಚ್ 29ರಂದು ನಾಡಿನ ಗಣ್ಯರರ ಉಪಸ್ಥಿತಿಯಲ್ಲಿ ಸುವರ್ಣ ವರ್ಷದ ಸಮಾರೋಪ ಸಮಾರಂಭಕ್ಕೆ ಸಜ್ಜಾಗುತ್ತಿದೆ.
ಮಾರ್ಚ್ 2013ರಲ್ಲಿ ಸುವರ್ಣ ಮಹೋತ್ಸವ ಉದ್ಘಾಟನೆಗೊಂಡು ಅಂದು ಶಾರದಾಪೂಜೆ, ಸಾಮೂಹಿಕ ಶನಿಕಲ್ಪೋಕ್ತ ಪೂಜೆ, ಯಕ್ಷಗಾನ ತಾಳ ಮದ್ದಳೆ ಸಂಪನ್ನಗೊಂಡಿತು. ನವೆಂಬರ್ ನಲ್ಲಿ ಯಕ್ಷಗಾನ ಬಣ್ಣಗಾರಿಕೆ ಶಿಬಿರ, ವೇಷಭೂಷಣ ಕಮ್ಮಟ ಯಕ್ಷಗಾನ ಪ್ರದರ್ಶನ, ಡಿಸೆಂಬರ್ ನಲ್ಲಿ ಹಿರಿಯ ಕಲಾವಿದ ಬನ್ನಂಜೆ ನಾರಾಯಣ ಇವರಿಗೆ ಕೆ. ಎಸ್. ನಿಡಂಬೂರು ಪ್ರಶಸ್ತಿ ಪ್ರದಾನ ಮತ್ತು ಶ್ರೀ ಸಾಲಿಗ್ರಾಮ ಮೇಳದವರಿಂದ ಬಯಲಾಟ, 2014 ಜನವರಿಯಲ್ಲಿ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರಿಗೆ ತೋನ್ಸೆ ಕಾಂತಪ್ಪ ಮಾಸ್ತರ್ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಕೇಂದ್ರದವರಿಂದ ನೃತ್ಯ ಪ್ರಾತ್ಯಕ್ಷಿಕೆ, ಮಾರ್ಚ್ ನಲ್ಲಿ ಒಂದು ವಾರ ಪರ್ಯಂತ ವಿವಿಧ ಹವ್ಯಾಸಿ ಕಲಾಸಂಸ್ಥೆಗಳ ಸ್ಪರ್ದೆ ಏರ್ಪಡಿಸಲಾಗಿತ್ತು. ಇದರಲ್ಲಿ ನಾಡಿನ 6 ಹವ್ಯಾಸಿ ಸಂಸ್ಥೆಗಳು ಸಕ್ರೀಯವಾಗಿ ತೊಡಗಿಸಿಕೊಂಡಿದ್ದವು. ಮಾರ್ಚ್ 29 ಸಂಜೆ ಸಮಾರೋಪ ಸಮಾರಂಭದ ಬಳಿಕ ಮಂಡಳಿಯ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
1964ರಲ್ಲಿ ಆಗಿನ ಗರಡಿ ಮುಖ್ತೇಸರರಾದ ಶತಾಯುಷಿ ಪಪ್ಪು ಪೂಜಾರಿಯವರ ಹಿರಿತನದಲ್ಲಿ ಮಾಧವ ಪೂಜಾರಿಯವರು ಸ್ಥಾಪಕ ಅಧ್ಯಕ್ಷರಾಗಿ, ಸಂಜೀವ ಪೂಜಾರಿಯವರು ಕಾರ್ಯದರ್ಶಿಯಾಗಿ, ಜಯಶೀಲ ಕಿದಿಯೂರು ಇವರು ಕೋಶಾದಿಕಾರಿಯಾಗಿ ಯಕ್ಷಗಾನ ಕಲಾಮಂಡಳಿಗೆ ಚಾಲನೆ ದೊರೆಯಿತು. ಸ್ಥಾಪಕ ಸದಸ್ಯರಾಗಿ ಜಯಶೀಲ ಕಿದಿಯೂರು, ಸಂಜೀವ ಪೂಜಾರಿ, ನಾರಾಯಣ ಪೂಜಾರಿ, ಗುಡ್ಡ ಪೂಜಾರಿ ಕಿದಿಯೂರು, ಗೋಪಾಲ ಪೂಜಾರಿ, ಸಂಜೀವ ಪೂಜಾರಿ, ಪೋಂರ್ಕ ಪೂಜಾರಿ, ಮಾಧವ ಪೂಜಾರಿ, ರಾಜೂ ಸುವರ್ಣ ಕಿದಿಯೂರು ಇವರು ನೇಮಕಗೊಂಡರು. ಪಡುಕೆರೆ ರಾಘುಮಾಸ್ತರ್ ರವರು ಶನಿ ಪಾರಾಯಣ ಮಾಡುವುದರ ಮೂಲಕ ಯಕ್ಷಗಾನ ತರಬೇತಿಗೆ ಚಾಲನೆ ದೊರೆಯಿತು.
1965ರಲ್ಲಿ ಗೋಳಿಗರಡಿ ಮೇಳದ ಹಾಸ್ಯ ಕಲಾವಿದ ಬೋಳ ಪೂಜಾರಿಯವರ ಸಲಹೆ ಮೇರೆಗೆ ಸಂಘದ ಗುರುಗಳಾಗಿ ತೋನ್ಸೆ ಕಾಂತಪ್ಪ ಮಾಸ್ತರನ್ನು ನೇಮಕ ಮಾಡಲಾಯಿತು. ಕಡೆಕಾರು, ಕಿದಿಯೂರು, ಕಪ್ಪೆಟ್ಟು ಪರಿಸರದ ಯಕ್ಷಗಾನ ಪ್ರೇಮಿಗಳ ಭಾಗವಹಿಸುವಿಕೆಯಿಂದ ಅಂದಿನ ವಾರ್ಷಿಕೋತ್ಸವ ಕಾರ್ಯಕ್ರಮಗಳು ಹಬ್ಬದೋಪಾದಿಯಲ್ಲಿ ನೆರವೇರಲ್ಪಡುತಿತ್ತು. ಮನೆ ಮನೆಗಳಲ್ಲಿ ಅತಿಥಿಗಳ ಆಗಮನ ಮತ್ತು ಹಬ್ಬದ ಅಡುಗೆಗಳು ಅಂದಿನ ದಿನದ ವಿಶೇಷತೆ ಎಣಿಸುತಿತ್ತು. ಅಂದಿನಿಂದ ಇಂದಿನ ತನಕ ಊರು ಪರವೂರುಗಳಲ್ಲಿ ಶನೀಶ್ವರ ಮಹಾತ್ಮೆ, ಕೋಟಿ ಚನ್ನಯ, ದೇವಿಮಹಾತ್ಮೆಯಂತ ಪುಣ್ಯ ಕಥಾಭಾಗಗಳನ್ನು ಪ್ರದರ್ಶಿಸಿ ಮಂಡಳಿಯು ಜನಮೆಚ್ಚುಗೆ ಪಡೆದಿದೆ. ಗ್ರಹಪ್ರವೇಶ, ಮದುವೆಯಂತ ಶುಭ ಸಂದರ್ಬದಲ್ಲಿ ಮಂಡಳಿಯ ಸದಸ್ಯರಿಂದಲೇ ಪ್ರದರ್ಶನ ನೀಡುವಂತ ಸಾಮರ್ಥ್ಯದ ತಂಡ ಸದ್ಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸಂಸ್ಥೆಯ ಗುರುಗಳಾಗಿ ಹಿರಿಯ ಭಾಗವತ ತೋನ್ಸೆ ಜಯಂತ ಕುಮಾರರು ಸಂಘದ ಸರ್ವ ಜವಬ್ದಾರಿಯನ್ನು ನೋಡಿಕೊಳ್ಳುತಿದ್ದು ಹಿರಿಯ ಸದಸ್ಯರಾದ ಬನ್ನಂಜೆ ನಾರಾಯಣ, ಗೋಪುಕೆ. ಅಶೋಕ ನಿಡಂಬಳ್ಲಿಯಂತಹ ಸಕಲ ವಿಭಾಗದಲ್ಲಿ ಪರಿಣತಿ ಪಡೆದ ಕಲಾವಿದರು ವೃತ್ತಿಪರರಂತೆ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಿರಿಯ ಸದಸ್ಯ ಬನ್ನಂಜೆ ನಾರಾಯಣರು ದೇಶದ ನಾನಾ ಭಾಗಗಳಲ್ಲಿ ವೇಷಧಾರಿಯಾಗಿ ಹಿಮ್ಮೇಳವಾದಕರಾಗಿ ಯಕ್ಷಗಾನ ಗುರುಗಳಾಗಿ ಖ್ಯಾತಿವೆತ್ತಿದ್ದಾರೆ. ಸದಸ್ಯರಾದ ಚಂದ್ರಕಾಂತ ಕಿದಿಯೂರ್, ದಯಾನಂದ ಕೆ. ಪ್ರಸಾದ್ ಟಿ. ಯಕ್ಷಗಾನದ ಸಂಪ್ರದಾಯಬದ್ದ ಪಾತ್ರ ಪೋಷಣೆಮಾತುಗಾರಿಕೆಯಿಂದ ಹವ್ಯಾಸಿ ವಲಯದಲ್ಲಿ ಗುರುತಿಸಲ್ಪಟ್ತಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಸಂಸ್ಥೆ ಯಕ್ಷಗಾನೇತರ ಚಟುವಟಿಕೆಗಳಲ್ಲೂ ತೊಡಗಿಸಿ ಕೊಂಡಿದೆ. ಗರಡಿಗೆ ಸುಮಾರು 2 ಕಿ. ಮಿ. ಅಗತ್ಯವಿರುವ ರಸ್ತೆಯನ್ನು ಶ್ರಮಾದಾನದ ಮೂಲಕ ಸಂಸ್ತೆಯ ಸದಸ್ಯರು ನಿರ್ಮಿಸಿದ್ದಾರೆ. ಸುಮಾರು 40 ವರ್ಷದ ಹಿಂದೆ ಗರಡಿಗೆ ವಿದ್ಯುತ್ತ್ ದೀಪ ನೀಡುವರೆ ಸಂಸ್ಥೆ ಹೋರಾಟ ನೆಡೆಸಿದೆ. ಕಡೆಕಾರು-ಕಿದಿಯೂರು-ಪಡುಕೆರೆ ಮೂರು ಗ್ರಾಮಗಳ ಹೈಸ್ಕೂಲ್ ವರೆಗಿನ ಕಲಿಯುವಿಕೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ಬಹುಮಾನ ನೀಡುತ್ತಾ ಬಂದಿದೆ.
ಎಸ್. ಎಸ್. ಎಲ್. ಸಿ. ಪರಿಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಬಾ ಪುರಸ್ಕಾರ ನೀಡಿ ಸನ್ಮಾನಿಸುತಿದ್ದಾರೆ. ಹತ್ತು ವರ್ಷದ ಹಿಂದೆ ಗರಡಿಯ ಬ್ರಹ್ಮ ಕಲಶೋತ್ಸವ ಸಂದರ್ಬದಲ್ಲಿ ಸಂಸ್ಥೆಯ ಸದಸ್ಯರು ಹತ್ತು ಸಾವಿರ ದನ ಸಹಾಯ ಮಾಡಿಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅಂಬಲಪಾಡಿ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಸಂದರ್ಬ ಯಕ್ಷಗಾನ ಸ್ಪರ್ದೆಯಲ್ಲಿ ದ್ವೀತೀಯ ಸ್ಥಾನ ಸದಸ್ಯರಿಗೆ ವೈಯಕ್ತಿಕ ನೆಲೆಯಲ್ಲಿ ಎರಡನೇ ವೇಷ ಸ್ರೀವೇಷ ಪುಂಡುವೇಷಗಳಲ್ಲಿ ಬಹುಮಾನ ಬಂದಿರುತ್ತದೆ. ಪರ್ಯಾಯ ಅವಧಿಯಲ್ಲಿ ಸಂಸ್ಥೆಯು ಹಲವಾರು ಪ್ರದರ್ಶನ ನೀಡಿ ಹೆಗ್ಗಳಿಕೆ ಪಡೆದಿದೆ.
ಅಂಬಲಪಾಡಿ ಯಕ್ಷಗಾನ ಮಂಡಳಿಯ ವತಿಯಿಂದ ನಿ. ಬಿ. ವಿಜಯ ಬಲ್ಲಾಳರು ಕೊಡಮಾಡುವ ಅಣ್ಣಾಜಿ ಬಲ್ಲಾಳ್ ಹೆಸರಿನ ಪ್ರಶಸ್ತಿಯು ಪ್ರಥಮ ವರ್ಷದಲ್ಲೇ ಸಂಸ್ಥೆಗೆ ನೀಡಲ್ಪಟ್ಟಿದೆ. ಹಿರಿಯ ಕಲಾವಿದರಾದ ಕುಂಜಾಲು ರಾಮಕೃಷ್ಣ, ಬೋಳ ಪೂಜಾರಿ, ರಮೇಶ ಕಿದಿಯೂರರನ್ನು ಸಂಸ್ಥೆ ಸನ್ಮಾನಿಸಿದೆ. ಇದೀಗ ಉಡುಪಿ ಶಾಸಕ ಪ್ರಮೋದ ಮದ್ವರಾಜ್ ಅವರ ಗೌರವಾದ್ಯಕ್ಷತೆಯಲ್ಲಿ ಶ್ರೀ ಸುದರ್ಶನ್ ಹೆಚ್ ಅವರು ಕಾರ್ಯಾದ್ಯಕ್ಷರಾಗಿ, ರಮೇಶ್ ಕಿದಿಯೂರು ಇವರು ಪ್ರದಾನ ಕಾರ್ಯದರ್ಶಿಯಾಗಿ ವಿವಿಧ ಸಮಿತಿಯನ್ನು ರಚಿಸಿಕೊಂಡು ವರ್ಷವಿಡಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭಕ್ಕೆ ಸಜ್ಜಾಗಿ ನಿಂತಿದೆ.
|
|
|